Monday 10 October, 2011

ಮತ್ತೂರುಜಿ

ಅಕ್ಟೋಬರ್ ,೨೦೧೧ ಜಗತ್ತೆಲ್ಲ ಸ್ಟೀವ್ ಜಾಬ್ಸ್ ತೀರಿಹೋದ ದುಖದಲ್ಲಿ ಮುಳುಗಿದ್ದರೆನನಗೆ ಬೇಸರ ತಂದ ಇನ್ನೊಂದು ಸಾವು ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಗಳದ್ದು. ಹಿರಿ ಜೀವಕೊನೆಯ ದಿನದವರೆಗೆ ಅಕ್ಷರಶಃ "ಬದುಕಿದ" ವ್ಯಕ್ತಿ.
ನನ್ನ ನೆಚ್ಚಿನ ಪ್ರವಚನಕಾರ.

ಶಿವಮೊಗ್ಗ ಜಿಲ್ಲೆಯ , ಮತ್ತೂರು ಎಂಬ ಸಣ್ಣ ಹಳ್ಳಿಯಲ್ಲಿ ರಾಮಕೃಷ್ಣಯ್ಯ ಮತ್ತು ನಂಜಮ್ಮ ಎಂಬ ದಂಪತಿಗಳ ಎಂಟನೆ ಮಗುವಾಗಿ ಜನಿಸಿದರು. ಬಡ ಬ್ರಾಹ್ಮಣ ಕುಟುಂಬ. ತಿನ್ನಲು ಹಿಡಿ ಅನ್ನಕ್ಕೂ ಒದ್ದಾಡಿದ ದಿನಗಳೂ ಕಳೆದರು. ವಾರಾನ್ನ ತಿಂದು ವಿದ್ಯಾರ್ಥಿ ಜೀವನ ಕಳೆದರು. ಮುಂದೆ ಮದರಾಸಿಗೆ ಹೋಗಿ ಉನ್ನತ ವ್ಯಾಸಂಗ ಮುಗಿಸಿದರು. ಮನೆಯ ಕಷ್ಟಗಳಿಗೆ ತಲೆ ಬಾಗಿ   ಮತ್ತೆ ಶಿವಮೊಗ್ಗಗೆ ಮರಳಿದರು. ಯಾವುದೋ  ಗಿರಣಿಯಲ್ಲಿ ಸಮಯ-ಕಾಯೋ ಕೆಲಸ ಮಾಡಿದರು, ಮತ್ತೆ ಬಸ್ inspector ಆಗಿ ಕೆಲಸ ಮಾಡಿದರು, ಅದಾದ ಮೇಲೆ ಅವರು ಭಾರತೀಯ ವಿದ್ಯಾ ಸಂಸ್ಥೆ ಸೇರಿ ಲಂಡನ್ನಲ್ಲಿ ಸೇವೆ ಸಲ್ಲಿಸಲು ತೆರಳಿದರು. ಈಗ, ಭಾರತೀಯ ವಿದ್ಯಾ ಸಂಸ್ಥೆ ಎಂದರೆ ಮತ್ತೂರು ಕೃಷ್ಣಮೂರ್ತಿಗಳು ಎನ್ನುವ ಮಟ್ಟಿಗೆ ಬೆಳೆಸಿದ್ದಾರೆ.

ಅವರ ಭಾರತೀಯತೆ ಬಗೆಗಿನ ಹೆಮ್ಮೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಪ್ರವಚನಗಳು, ಕುಮಾರವ್ಯಾಸ ಭಾರತದ ವಾಚನ, ನವರಸಗಳ ಉಪಯೋಗ, ಬರೆದ ೪೦ಕ್ಕು ಹೆಚ್ಚು ಹೊತ್ತಿಗೆಗಳು ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ! ಅವರ ಬಗ್ಗೆ ತಿಳಿಯದಿದ್ದವರು ಅವರ ಬಗ್ಗೆ ಓದಿ. ಅವರ ಪುಸ್ತಕಗಳನ್ನು ಓದಿ, ಅವರ ಪ್ರವಚನ ಕೇಳಿ. 

ನನಗೆ ಇಷ್ಟವಾದ ಕೆಲವು ಅವರ ನಿಲುವುಗಳು ಪಟ್ಟಿ ಮಾಡಿದ್ದೀನಿ.  
·  ನಮಗೆ ಬೇರೆ ಸಂಸ್ಕೃತಿಯ ಮುಂದೆ ನಮ್ಮದು ಅಲ್ಪ ಎನಿಸುವುದುದಕ್ಕೆ ಕಾರಣ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಮ್ಮ ಸೋಲು

·  ಬೇರೆಯ ಸಂಸ್ಕೃತಿಯಿಂದ ದೂರವಿರೋದು ಸರಿಯಿಲ್ಲ, ಆದರೆ ನಮ್ಮ ಸಂಸ್ಕೃತಿಯ ಬಲಗಳನ್ನೂ ತಿಳಿದಿರಿ

·  ವಿಶಾಲ ಹೃದಯ ಮತ್ತೆ ಉನ್ನತ ಯೋಚನೆ ಇಡಿ ಜಗತ್ತನ್ನ ಒಂದೇ ಸಂಸಾರ ಮಾಡುತ್ತದೆ.

·  ಬಡತನವೇ ನನ್ನ ಯಶಸ್ಸಿನ ಹಾದಿಯಾಯಿತು

·  ಬಡತನವು ನನಗೆ ವರವಾಗಿ ಬಂತು, ಕಷ್ಟದ ಹಾದಿಗೆ ಸೋಪಾನವಾಯಿತು, ಕ್ಲಿಷ್ಟತೆಯನ್ನು ಧೈರ್ಯದಿಂದ ಎದುರಿಸಿ ಗೆಲ್ಲುವ ಹುಮ್ಮಸ್ಸು ಕೊಟ್ಟಿತು.

·  ಜನ ನಿಮ್ಮನ್ನು ಗೌರವಿಸುವುದು ನೀವು ನಿಮ್ಮ ಭಾರತೀಯತೆ ಉಳಿಸಿಕೊಂಡರೆ, ಬೇರೆಯನ್ನು ಅನುಕರಣೆ ಮಾಡಿದರೆ ಅಲ್ಲ.

·  ಮಕ್ಕಳಲ್ಲಿ ಮೌಲ್ಯ ಬೆಳಸುವುದು ತಂದೆ-ತಾಯಿಯರ ಕರ್ತವ್ಯ. ಸ್ವಲ್ಪ ತ್ಯಾಗವೂ ಅತ್ಯವಶ್ಯಕ.

·  ಜೀವನದ ಜಂಜಾಟದಲಿ, ಮಕ್ಕಳಲ್ಲಿ ಮೌಲ್ಯ ತುಂಬಲು ಮರೆತರೆಅವರ ಜೀವನ ನಾಶ ಮಾಡುವುದಲ್ಲದೆ, ನಿಮ್ಮ ಮಕ್ಕಳನ್ನೂ ಜೀವನದಲ್ಲಿ ಸೋಲಿಸಿ ಬಿಟ್ಟೀರಿ ಜೋಕೆ!   


·   ಬ್ರಿಟಿನ್ ರಾಣಿಯ ಜೊತೆ ಕೈ ಕುಲುಕಿದ್ದರೆನಮ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ತಿಳಿಸುವ ಸಂದರ್ಭವೇ ಬರುತ್ತಿರಲಿಲ್ಲ." (ಕೈ ಕುಲುಕಲು ರಾಣಿಯು ತನ್ನ gloves ತೆಗಿಯುತ್ತಿರುವಾಗ ಇವರು ಎರಡೂ ಕೈ ಜೋಡಿಸಿ ಮುಗುಳ್ನಗುತ್ತ ನಿಂತಿದ್ದರು. ಚಕಿತಳಾದ ರಾಣಿನಮಸ್ತೆ"ಯ ಬಗ್ಗೆ ಕೇಳಿ ತಿಳಿದುಕೊಂಡರು )

ಆ ಮಹಾನ್ ಮನುಷ್ಯನ ಹುಟ್ಟಿದ ನಾಡಲ್ಲಿ ಹುಟ್ಟಿರೋದು ನನ್ನ ಪುಣ್ಯ!  ಮಹನೀಯರೇ, ಎಲ್ಲಿದ್ದೀರೋ ಏನೋ, ನಿಮ್ಮ ದೇಹ ಅಲ್ಪಾಯುವಾದರು, ನಿಮ್ಮ ನೆನಪು, ಸಾಧನೆ ಚಿರಾಯು!